ಕಾವೇರಿ ಹೋರಾಟದಲ್ಲಿ ಕಲಾವಿದರು ಭಾಗಿಯಾಗದಿದ್ದರೆ ಕಾವೇರಿ ಅಥವಾ ನಾಡು ನುಡಿಯ ಬಗ್ಗೆ ಅಭಿಮಾನ ಇಲ್ಲ ಎನ್ನುವಂತೆ ಮಾತನಾಡುವ ರೀತಿ ಸರಿಯಲ್ಲ ಎಂದು ನಟ ಹಾಗು ರಾಜ್ಯಸಭಾ ಸದಸ್ಯ ಜಗ್ಗೇಶ್ ತೀವ್ರ ಅಸಮಾಧಾನ ಅತೃಪ್ತಿ ವ್ಯಕ್ತಪಡಿಸಿದರು.
ಕಲಾವಿದರು ಕಾವೇರಿ ಬಂದ ಕೂಡಲೇ ಸಮಸ್ಯೆ ಬಗೆಹರಿಲ್ಲ. ಕಲಾವಿದರ ನಾಡಿನ ಪರ ಇದ್ದೇ ಇರುತ್ತೇವೆ. ಬಂದಿಲ್ಲ ಎಂದು ಕಾವೇರಿ ಹೋರಾಟದ ಸಂದರ್ಭದಲ್ಲಿ ಕಲಾವಿದರನ್ನು ಎಳೆದು ತರಬೇಡಿ ಎಂದರು.
ಸಂಕಷ್ಟ ಸೂತ್ರ ಅನಿವಾರ್ಯ:
ಕಾವೇರಿ ನೀರು ಸಮಸ್ಯೆಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗು ಸುಪ್ರೀಂಕೋರ್ಟ್ ಮುಂದೆ ಹೋಗಿ ಸಂಕಷ್ಟ ಸೂತ್ರ ರೂಪಿಸದಿದ್ದರೆ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಿಬಾರಿಯೂ ಹೋರಾಟ ಮಾಡುವುದು ಅನಿವಾರ್ಯ. ಪದೇ ಪದೇ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ
ಪ್ರಧಾನಿ ಯಾಕೆ ಮದ್ಯ ಪ್ರವೇಶಿಸಬೇಕು
ಕಾವೇರಿ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾಕೆ ಮಧ್ಯ ತರುತ್ತೀರಿ, ತಮಿಳುನಾಡಿಗೆ ಏಕಾ ಏಕಿ ನೀರು ಬಿಟ್ಟದ್ದು ರಾಜ್ಯ ಸರ್ಕಾರದ ದೊಡ್ಡ ತಪ್ಪು ಎಂದು ನಟ ಹಾಗು ರಾಜ್ಯಸಭಾ ಸದ್ಯ ಜಗ್ಗೇಶ್ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಸಮಿತಿ ಹೇಳಿದೆ ಎನ್ನುವ ಕಾರಣಕ್ಕೆ ರಾಜ್ಯದ ಸಂಸದರು, ಸರ್ವ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದ ನೀರು ಬಿಟ್ಟಿದ್ದು ತಪ್ಪು. ನೀರು ಬಿಡುವ ಮುನ್ನ ಪರಿಸ್ಥಿತಿ ಹೀಗಿದೆ ಏನು ಮಾಡೋಣ ಎಂದು ಚರ್ಚೆ ನಡೆಸಬೇಕಾಗಿತ್ತು. ಈಗ ನೀರು ಬಿಟ್ಟು ಕೇಂದ್ರದ ಮೇಲೆ ಹಾಕುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಚಲನಚಿತ್ರ ವಾಣಿಜ್ಯಮಂಡಳಿ ಹಮ್ಮಿಕೊಂಡಿದ್ದ ಕಾವೇರಿ ಹೋರಾಟದಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಮಿಳುನಾಡಿಗೆ ಬಿಡುವ ನೀರು ಬಿಟ್ಟು ನೆಪ ಮಾತ್ರಕ್ಕೆ ಸರ್ವಪಕ್ಷ ಸಭೆ ಕರೆದರೆ ಏನು ಪ್ರಯೋಜನ ಎಂದು ದೂರಿದ್ದಾರೆ.
ಕರ್ನಾಟಕ, ತಮಿಳು ನಾಡು ಸರ್ಕಾರ ಕೇಂದ್ರ ಸರ್ಕಾರವನ್ನು ಮಧ್ಯ ಪ್ರವೇಶಿಸಿ ಎಂದು ಕೇಳದೆ ಪ್ರಧಾನಿ ಆಗಲಿ ಅಥವಾ ಕೇಂದ್ರ ಸರ್ಕಾರ ಹೇಗೆ ಮಧ್ಯ ಪ್ರವೇಶ ಮಾಡಲು ಸಾಧ್ಯ ಎಂದು ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ.
ಕಾವೇರಿ ನೀರಿನ ಹಂಚಿಕೆ ಸಮಸ್ಯೆ ಇಂದು ನಿನ್ನೆಯದಲ್ಲ. ಈಸ್ಟ್ ಇಂಡಿಯಾ, ಬ್ರಿಟಿಷರ ಕಾಲದಲ್ಲೇ ಹುಟ್ಟಿಕೊಂಡ ಸಮಸ್ಯೆ. ಆದರೆ ಎರಡು ರಾಜ್ಯಗಳ ನಡುವೆ ಇರುವ ಈ ಕಾವೇರಿ ನೀರಿನ ಸಮಸ್ಯೆಯ ಇತಿಹಾಸ ತಿಳಿಯದೆ ಮಾತನಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಗರಂ ಆದ ಜಗ್ಗೇಶ್
ಆಭರಣ ಹಾಕಿಕೊಂಡು ಎಂಆರ್ ಐ ಸ್ಕಾನ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾ ಮಗ್ಹಾ ಟೀಕೆಗೆ ಒಳಗಾದ ಜಗ್ಗೇಶ್ ಆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ಹಾದಿ ಬೀದಿಯಲ್ಲಿ ಹೇಳುವುದಿಲ್ಲ ಎಂದು ಗರಂ ಆದರು